"ಕುರುಡನಿಗೆ ಕನ್ನಡಕ ಎಷ್ಟು ಮುಖ್ಯ ಗುರುವಿಗೆ ಶಿಷ್ಯನ ಆಸರೆ ಯು ಅಷ್ಟೇ ಮುಖ್ಯ"!
"ಗೆಲುವು ಸಾಧಿಸುವ ವಿಶ್ವಾಸ ಇದ್ದರೆ ಯಾವುದೇ ಆಸೆ ಆಮಿಷಗಳಿಗೆ ಒಳಗಾಗದೆ ಹಿಡಿದ ಕೆಲಸವನ್ನು ಸಾಧಿಸುವನು ಅವನೇ ನಿಜವಾದ ಸಿದ್ದಿ ಪುರುಷ, ಅಗ್ನಿ ಪರೀಕ್ಷೆಯಿಂದ 100 ಶಿಷ್ಯರಲ್ಲಿ ಕೊನೆಗೆ ಒಬ್ಬನೇ ಉಳಿಯುವನು ಅವನು ನಿಜವಾದ ಪ್ರೀತಿ- ಶಿಷ್ಯ "
ಈ ಜಗತ್ತು ವಿಶಾಲವಾದ ರಂಗಭೂಮಿಯಿದ್ದಂತೆ. ಇಲ್ಲಿ ಒಬ್ಬರನ್ನು ನೋಡಿ, ಮತ್ತೊಬ್ಬರು ಅನುಕರಣೆ ಮಾಡುತ್ತಾರೆ. ಯಾರಾದರೊಬ್ಬರು ಒಂದು ಒಳ್ಳೆಯ ಕೆಲಸ ಮಾಡಿ ಗೆಲುವು ಸಾಧಿಸಿದರೆ, ಬಹಳಷ್ಟು ಜನರಿಗೆ ನಾವೂ ಹೀಗೆಯೇ ಮಾಡಿ ಏಕೆ ಗೆಲುವು ಸಾಧಿಸಬಾರದು? ಎಂದನ್ನಿಸುತ್ತದೆ. ಆರಂಭಿಸಿಯೇ ಬಿಡುತ್ತಾರೆ. ಆದರೆ ಕಾರ್ಯವನ್ನು ಪೂರ್ಣಗೊಳಿಸುವಂತಹ ಸ್ಥಿರ ಬುದ್ಧಿಯಿರುವುದಿಲ್ಲ. ಇದಕ್ಕೆ ಉತ್ತಮವಾದ ಒಂದು ಪ್ರಸಂಗವಿಲ್ಲಿದೆ.
ಪ್ರಾಚೀನ ಕಾಲದಲ್ಲಿ ಗುರುವೊಬ್ಬರು ಶತಾಯುವಾದರು. ಆಗ ಅವರು ಯೋಗ ಸಮಾಧಿಯಿಂದ ದೇಹ ತ್ಯಾಗ ಮಾಡುವುದೆಂದು ನಿಶ್ಚಯಿಸಿದರು. ಆದರೆ ಅದಕ್ಕಿಂತ ಮೊದಲು ತನ್ನ ಆಶ್ರಮಕ್ಕೆ ಒಬ್ಬ ಉತ್ತರಾಧಿಕಾರಿಯನ್ನು ಆರಿಸಬೇಕಿತ್ತು. ಕಳೆದ ಇಪ್ಪತ್ತು ವರ್ಷಗಳಿಂದ ಅತ್ಯಂತ ನಿಷ್ಠೆಯಿಂದ ಗುರುಸೇವೆ ಮಾಡುತ್ತಿದ್ದ ಒಬ್ಬ ಶಿಷ್ಯನಿದ್ದ. ಆ ಶಿಷ್ಯನೊಡನೆ ನಮ್ಮ ಆಶ್ರಮದ ಪರಿಸರದಲ್ಲಿ ಆಧ್ಯಾತ್ಮಿಕ ಮಾರ್ಗದಲ್ಲಿ ನಡೆಯಬಯಸುವ ನೂರು ಮಂದಿ ಯುವಕರನ್ನು ಕರೆದುಕೊಂಡು ಬಾ ಎಂದರು.
ಶಿಷ್ಯನು ಗುರುವಿಗೆ ವಂದಿಸಿ ಹೊರಟ. ಆದರೆ ದಾರಿಯಲ್ಲಿ ಆತ ಯೋಚಿಸಿದ. ಗುರುಗಳು ನನ್ನನ್ನು ಉತ್ತರಾಧಿಕಾರಿಯನ್ನಾಗಿ ಮಾಡುವುದಿದ್ದರೆ ಈ ನೂರು ಮಂದಿ ಜತೆಗಾರರನ್ನೇಕೆ ನೀಡ ಬಯಸುತ್ತಾರೆ? ಹೇಗಿದ್ದರೂ ಗುರುಗಳ ಆಜ್ಞೆಯನ್ನು ಪಾಲಿಸಬೇಕೆಂದು ಆಶ್ರಮದ ಪರಿಸರದಿಂದ ನೂರು ಮಂದಿ ತರುಣರನ್ನು ಆರಿಸಿ, ಕರೆದು ತಂದನು. ಆದರೆ ಆಶ್ರಮಕ್ಕೆ ಬರುತ್ತಿರುವಾಗ ಅವನಿಗೊಂದು ಅಮಂಗಳಕರ ವಾರ್ತೆ ಸಿಕ್ಕಿತು. ರಾಜ್ಯದ ಎಂಬತ್ತು ಮಂದಿ ಕನ್ಯೆಯರನ್ನು ಒಯ್ಯುತ್ತಿರುವ ಹಡಗೊಂದು ಸಮುದ್ರದಲ್ಲಿ ಮುಳುಗಿದ್ದರಿಂದಾಗಿ ಎಲ್ಲೆಡೆ ಶೋಕ ವ್ಯಾಪಿಸಿತ್ತು.
ರಾಜನು ಆ ಕನ್ಯೆಯರ ಉದ್ದಾರಕ್ಕಾಗಿ ಒಂದು ಘೋಷಣೆ ಮಾಡಿದ. ಯಾರು ಈ ಕನ್ಯೆಯರನ್ನು ಮದುವೆಯಾಗುವರೋ ಅವರಿಗೆ ಅಪಾರ ಸಂಪತ್ತು ವರದಕ್ಷಿಣೆಯಾಗಿ ದೊರೆಯಲಿದೆ. ಈ ಘೋಷಣೆಯನ್ನು ಕೇಳುತ್ತಲೇ, ಆಶ್ರಮದ ಸೇವೆಗೆಂದು ಹೊರಟ ನೂರು ಯುವಕರ ಪೈಕಿ ಎಂಬತ್ತು ಮಂದಿ ವಿವಾಹಕ್ಕೆ ಸಿದ್ಧರಾದರು. ಉಳಿದ ಇಪ್ಪತ್ತು ಮಂದಿಯೊಂದಿಗೆ ಶಿಷ್ಯನು ಆಶ್ರಮದತ್ತ ಹೋಗುತ್ತಿರುವಾಗ, ರಸ್ತೆಯ ಕಲ್ಲು, ಮುಳ್ಳುಗಳ ತೊಂದರೆಯಿಂದ ನೊಂದು ಹತ್ತೊಂಬತ್ತು ಮಂದಿ ಕಾಣೆಯಾದರು.
ಶಿಷ್ಯನು ಗುರುಗಳ ಆಶ್ರಮಕ್ಕೆ ತಲಪಿದಾಗ, ಒಬ್ಬನು ಮಾತ್ರ ಉಳಿದಿದ್ದು, ಗುರುಗಳಿಗೆ ನಿವೇದಿಸಿದ, ಗುರುವರ್ಯ, ತಾವು ನೂರು ಮಂದಿಯನ್ನೇಕೆ ತರಲು ಹೇಳಿದಿರೆಂದು ಸಂದೇಹವಿತ್ತು. "ಆದರೆ ಈಗ ಗೊತ್ತಾಯ್ತು. ಹೊರಡುವಾಗ ನೂರು ಜನರಿದ್ದರೂ ಕಡೆಗೆ ಉಳಿದದ್ದು ಒಬ್ಬ ಮಾತ್ರ". ಬರುವಾಗ ಬೆತ್ತಲೆ ಹೋಗುವಾಗ ಬೆತ್ತಲೆ ನಡುವೆಯೇ ಇರುವುದು ಕತ್ತಲೆ. ಗುರುಗಳ ಚರಣಗಳನ್ನು ಹಿಡಿದು ಕ್ಷಮೆ ಕೋರಿದ. ಗುರುಗಳು ಶಿಷ್ಯನನ್ನು ಸಂತಸದಿಂದ ಬಿಗಿದಪ್ಪಿಕೊಂಡರು.
ಹೀಗೆ ಅಂತಿಮ ಹಂತದಲ್ಲಿ ಶಿಷ್ಯನಿಗೆ ತನ್ನ ಗುರುಗಳ ಬುದ್ಧಿಮತ್ತೆ, ದೂರದರ್ಶಿತ್ವ ಹಾಗೂ ಪಾರದರ್ಶಕವಾದ ಉಚ್ಚ ನಿರ್ಣಾಯಕ ಚೈತನ್ಯದ ಬಗ್ಗೆ ಪೂರ್ಣ ಭರವಸೆಯುಂಟಾಗಿ ಅವರ ಆದೇಶದಂತೆ ನಡೆಯುವುದೇ ಸೂಕ್ತ ಎಂಬ ಜ್ಞಾನೋದಯವಾಯಿತು.